ಕುಂದಾಪುರದ ಹೋಲಿ ರೋಸರಿ ಚರ್ಚ್ ” ತೆರಲಿ “

kundapuradotcom@gmail.com
3 Min Read

ಕುಂದಾಪುರವನ್ನು ಇತಿಹಾಸದಲ್ಲಿ ಬಾರ್ಸಿಲೋರ್ ಎಂದು ಕರೆಯಲಾಗುತ್ತದೆ. ಕುಂದಾಪುರದ ಹೋಲಿ ರೋಸರಿ ಚರ್ಚ್ ಬಹಳ ಪ್ರಾಚೀನವಾಗಿದ್ದು ಉಡುಪಿ ಜಿಲ್ಲೆಯ ಅತ್ಯಂತ ಹಳೆಯ ಚರ್ಚ್ ಆಗಿದೆ. ಈ ಚರ್ಚ್ 455 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದನ್ನು ಪೋರ್ಚುಗೀಸರು 1570 ರಲ್ಲಿ ಸ್ಥಾಪಿಸಿದರು. ಮೊದಲ ಹೋಲಿ ರೋಸರಿ ಚರ್ಚ್ ಕೋಟೆ ಬಾಗಿಲಿನಲ್ಲಿದೆ. ಕ್ರಮೇಣ, ಈ ಸ್ಥಳವನ್ನು ಸ್ಥಳಾಂತರಿಸಲಾಯಿತು ಮತ್ತು ಪ್ರಸ್ತುತ ಸ್ಥಳದಲ್ಲಿ ನಿರ್ಮಿಸಲಾಯಿತು.

ಪೋರ್ಚುಗೀಸರು 1542 ರಲ್ಲಿ ಕುಂದಾಪುರಕ್ಕೆ ಆಗಮಿಸಿದ್ದರು. ನಂತರ, ಅವರು ಇಲ್ಲಿ ಒಂದು ಚರ್ಚ್ ಅನ್ನು ಸ್ಥಾಪಿಸಿದರು. ಈ ಚರ್ಚ್‌ನ ದಾಖಲೆಗಳು ಗೋವಾದಲ್ಲಿ ಕಂಡುಬಂದಿವೆ, ಅದರ ಪ್ರಕಾರ ಈ ಚರ್ಚ್ ಅತ್ಯಂತ ಹಳೆಯ ಚರ್ಚ್ ಎಂದು ದೃಢೀಕರಿಸಲಾಗಿದೆ.

ಈ ಚರ್ಚ್ ದಕ್ಷಿಣ ಕನ್ನಡದ ಅವಿಭಜಿತ ಜಿಲ್ಲೆಯ ಎರಡನೇ ಹಳೆಯ ಚರ್ಚ್ ಆಗಿದೆ. ಮೊದಲನೆಯದು 1568 ರಲ್ಲಿ ಸ್ಥಾಪನೆಯಾದ ಮಂಗಳೂರಿನ ರೊಸಾರಿಯೋ ಕ್ಯಾಥೆಡ್ರಲ್. ಕುಂದಾಪುರದಲ್ಲಿ ಚರ್ಚ್ ನಿರ್ಮಿಸಲಾದ 1570 ರ ಮೊದಲು ಕಾರವಾರ ಪ್ರಾಂತ್ಯದಲ್ಲಿ ಯಾವುದೇ ಚರ್ಚ್ ಇರಲಿಲ್ಲ.

ಪೋರ್ಚುಗೀಸರು ನಿರ್ಮಿಸಿದ ಈ ಚರ್ಚ್‌ನಲ್ಲಿ ಪವಿತ್ರ ರೋಸರಿ ಮಾತೆಯ ಮೇಲಿನ ಭಕ್ತಿಯನ್ನು ಗೋವಾದಿಂದ ಬಂದ ಪುರೋಹಿತರು ಮತ್ತು ಸ್ಥಳೀಯ ಭಕ್ತರು ಮುಂದುವರಿಸಿದರು. ಹಿಂದೆ, ಈ ಚರ್ಚ್‌ನ ಮಿತಿಗಳು ಬಹಳ ದೂರ ವಿಸ್ತರಿಸಿದ್ದವು.

ಪ್ಯಾರಿಷ್ ಪಾದ್ರಿಯಾಗಿ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಕುಂದಾಪುರದ ಫಾದರ್ ಜೋಸೆಫ್ ವಾಜ್. ಅವರ ಹೆಸರಿನಲ್ಲಿ ಅನೇಕ ಪವಾಡಗಳು ನಡೆದಿವೆ. 2015 ರಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಸಂತ ಪದವಿ ನೀಡಿದರು. ಈ ಸ್ಥಾನಕ್ಕೆ ಏರಿದ ಮೊದಲ ಕೊಂಕಣಿ ಹಿನ್ನೆಲೆಯ ಭಾರತೀಯ ಅವರು. ಅವರು ಧ್ಯಾನ ಮಾಡುತ್ತಿದ್ದ ಸಮಯದಲ್ಲಿ ಅವರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಗಾಳಿಯಲ್ಲಿ ತೇಲುತ್ತಿರುವುದನ್ನು ಮತ್ತೊಬ್ಬ ಪಾದ್ರಿ ವೈಯಕ್ತಿಕವಾಗಿ ನೋಡಿದ್ದರು. ಇದು ಕುಂದಾಪುರ ಚರ್ಚ್‌ನಲ್ಲಿ ನಡೆದ ಪವಾಡಗಳಲ್ಲಿ ಒಂದಾಗಿದೆ. ಈ ಚರ್ಚ್‌ನಲ್ಲಿ ಇನ್ನೂ ಅನೇಕ ಪವಾಡಗಳು ಸಂಭವಿಸಿವೆ.

ಇತ್ತೀಚೆಗೆ, ಇಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮದರ್ ರೋಸರಿ ಮತ್ತು ಸೇಂಟ್ ಜೋಸೆಫ್ ಅವರ ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.

ತೆರಲಿ ( ಸಾಂತ್ ಮಾರಿ )
ರೋಮನ್ ಕಥೋಲಿಕ್ ಹಾಗೂ ಸಿರಿಯನ್ ಕಥೋಲಿಕ್ ಚರ್ಚ್ ಗಳಲ್ಲಿ ಪ್ರತೀವರ್ಷ ನವೆಂಬರ್ , ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಭಾನುವಾರ ಕೋಂಪ್ರ್ ಆಚರಣೆಯ ಅಂಗವಾಗಿ ಪರಮಪ್ರಸಾದದ ಸಾರ್ವಜನಿಕ ಮೆರವಣಿಗೆ ಹಾಗೂ ಆಹ್ವಾನಿತ ಗುರುವಿನಿಂದ ಭೋದನಾ ಪ್ರಸಂಗ ವಿರುತ್ತದೆ.

ಆಯಾ ಇಗರ್ಜಿ ಪ್ರಾಂತ್ಯಕ್ಕೆ ಒಳಪಟ್ಟವರು ದೇವರಿಗೆ ಕೃತಜ್ಞತಾಪೂರ್ವಕವಾಗಿ ಪ್ರತಿ ವರ್ಷ ಆ ಇಗರ್ಜಿಯ ಹಬ್ಬವನ್ನು ಆಚರಿಸುವ ಸಂಪ್ರದಾಯ ಜಾರಿಯಲ್ಲಿದೆ.ಇದನ್ನು ತೆರಲಿ ಅಥವಾ parish feast ಎಂದು ಕರೆಯುತ್ತಾರೆ.

ಈ ಸಮಯದಲ್ಲಿ ಇಗರ್ಜಿಯೊಳಗೆ ದೈವಾರಾಧನೆ ನಡೆಯುತ್ತಿದ್ದರೆ ಹೊರಗಡೆ ಜಾತ್ರೆ ನಡೆಯುತ್ತದೆ. ಈ ತೆರಾಲಿ ಹಬ್ಬದ ಸಂದರ್ಭದಲ್ಲಿ ಹಬ್ಬದ ಹಿಂದಿನ ಆದಿತ್ಯವಾರದಂದು ಪರಮ ಪ್ರಸಾದದಲ್ಲಿರುವ ಯೇಸು ಕ್ರಿಸ್ತರಿಗೆ ಬಹಿರಂಗವಾಗಿ ಮೆರವಣಿಗೆಯಲ್ಲೊಯ್ದು ಗೌರವಿಸುವ ಸಂಪ್ರದಾಯವಿದೆ ಇದನ್ನು ಭ್ರಾತೃ ಭಾನುವಾರ ಎನ್ನುತ್ತಾರೆ.

ಮಂಗಳವಾರ ಸಂಜೆ ಹಬ್ಬದ ಅಂಗವಾಗಿ ವೇಸ್ಪೆರ್ ಆಚರಣೆಯಂದು ಕಿರುಮೆರವಣಿಗೆ ಹಾಗೂ ಪೂಜೆ, ಚರ್ಚ್ ವಠಾರದಲ್ಲಿ ಹಬ್ಬದ ವರ್ಣರಂಜಿತ ಸಂತೆ, ವಿವಿಧ ಆಟಗಳು, ಲಕ್ಕಿಡಿಪ್, ಸೋಡ್ತಿ ,ಹೌಸಿ ಹೌಸಿ, ಸುಡುಮದ್ದು ಮುಂತಾದ ಮನರಂಜನೆ ಇರುತ್ತದೆ. ಮರುದಿನ ಬುಧವಾರ ಸಂತೆ ಮುಂದುವರಿದು ಚರ್ಚಿನ ದಾನಿಗಳಿಗೆ, ಕುಟುಂಬಸ್ಥರಿಗೆ ಗೌರವದ ಮೇಣದ ಬತ್ತಿ ವಿತರಣೆಯೊಂದಿಗೆ ಸಂಭ್ರಮದ ಪೂಜೆ ಇರುತ್ತದೆ. ಈ ಹಬ್ಬ ಮುಖ್ಯ ಉದ್ದೇಶ ನೆಂಟರಿಷ್ಟರು, ಬಂಧು ಮಿತ್ರರು ವರ್ಷಕ್ಕೆ ಒಮ್ಮೆಯಾದರೂ ಮನೆಯಲ್ಲಿ ಸೇರುವುದು. ವಿವಿಧ ಮಾಂಸಹಾರಿ ಭಕ್ಷ್ಯ ಹಾಗೂ ಅಕ್ಕಿಯಿಂದ ತಯಾರಿಸಿದ ಖಾದ್ಯಗಳ ವಿಶೇಷ ಅಡುಗೆಯನ್ನು ಸೇವಿಸುತ್ತಾರೆ.

ಇಡೀ ವರುಷದಲ್ಲಿ ಒಮ್ಮನಸ್ಸಿನಿಂದ ಬಾಳಲು ಸಾಧ್ಯ ಮಾಡಿದ್ದಗೋಸ್ಕರ ತೋರುವಂತಹ ಕೃತಜ್ಞತಾ ಭಾವನೆ ಇದಾಗಿದೆ. ತೆರಾಲಿ ಹಬ್ಬದ ದಿನ ಹಿಂದಿನ ದಿನ ಸಂಜೆ ಪವಿತ್ರ ಬೈಬಲ್ ಗ್ರಂಥವನ್ನು ಗೌರವಿಸಿ, ಪವಿತ್ರ ಬೈಬಲ್ ವಾಕ್ಯವನ್ನು ಧ್ಯಾನಿಸುವ ಆಚರಣೆಯೂ ಕೆಲವೆಡೆ ನಡೆಯುತ್ತದೆ.

ಮಕ್ಕಳಿಗಂತೂ ಈ ಹಬ್ಬ ಅತ್ಯಂತ ಪ್ರೀಯವಾದದ್ದು. ಹಿರಿಯರು ಕೊಡುವ ಹಬ್ಬದ ಖರ್ಚಿನ ಕಾಸು, ಆಟಿಕೆಗಳ ಖರೀದಿ, ಕ್ರಿಸ್ ಮಸ್ ಮೂರ್ತಿಗಳ ಖರೀದಿ, ಸಾಂಪ್ರದಾಯಿಕ ಮಿಠಾಯಿ ಖರೀದಿ. ಮುಂತಾದವು ಇರುತ್ತದೆ.

ಹಿರಿಯರು ಬಂಧುಮಿತ್ರರೊಂದಿಗೆ ಭೋಜನ ಹಬ್ಬದ ಸಂಜೆ ಮನರಂಜನೆ ಅಂಗವಾಗಿ ಕೆಲವು ಚರ್ಚಗಳಲ್ಲಿ ನಾಟಕ, ಹಾಸ್ಯ ಸಂಜೆ ಏರ್ಪಡಿಸುತ್ತಾರೆ. ಮೊದಲೆಲ್ಲಾ ತೆರಲಿ ಹಬ್ಬಕ್ಕೆ ಮರದ ತೊಟ್ಟಿಲು, ಮರದ ಕುದುರೆ ಸವಾರಿ, ಮುಂತಾದವು ಬಹಳ‌ ಆಕರ್ಷಣೆ ಯಾಗಿತ್ತು. ಈಗ ಅವೆಲ್ಲಾ ಮಾಯವಾಗಿದೆ.

ತೆರಲಿ‌ ಹಬ್ಬದ ಮುಖ್ಯ ಉದ್ದೇಶ ಭ್ರಾತತ್ವ ಹಾಗೂ ಸಾಮರಸ್ಯತೆ, ಸರ್ವರಿಗೂ ತೆರಲಿ ಹಬ್ಬದ ಶುಭಾಶಯಗಳು

ವರದಿ: ಜಾಯ್ ಜೆ. ಕರ್ವಾಲೋ
ಕುಂದಾಪುರ

Share This Article
Leave a Comment
error: Content is protected !!